Friday, September 4, 2026
Homeರಾಜಕೀಯಉದ್ಯಾನವನಗಳ ವಿಧೇಯಕ ಹಿಂಪಡೆಯಲು ಸರ್ಕಾರದ ನಿರ್ಧಾರ: ಬಿಜೆಪಿಯ ನಿರಂತರ ಹೋರಾಟಕ್ಕೆ ಜಯ – ಎನ್. ರವಿಕುಮಾರ್

ಉದ್ಯಾನವನಗಳ ವಿಧೇಯಕ ಹಿಂಪಡೆಯಲು ಸರ್ಕಾರದ ನಿರ್ಧಾರ: ಬಿಜೆಪಿಯ ನಿರಂತರ ಹೋರಾಟಕ್ಕೆ ಜಯ – ಎನ್. ರವಿಕುಮಾರ್

ಬೆಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಾನವನಗಳನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ನಿರಂತರ ಹೋರಾಟ ಮತ್ತು ತೀವ್ರ ಜನಾಂದೋಲನದ ಒತ್ತಡಕ್ಕೆ ಮಣಿದು ಸರ್ಕಾರವು ಉದ್ಯಾನವನಗಳ ವಿಧೇಯಕವನ್ನು ಹಿಂಪಡೆಯುವಂತಾಗಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರದ ಈ ಕ್ರಮವನ್ನು ಬಿಜೆಪಿಯ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ ಎಂದು ಬಣ್ಣಿಸಿದ್ದಾರೆ. ಹಿರಿಯ ಪರಿಸರವಾದಿ ಎ.ಎನ್. ಯಲ್ಲಪ್ಪ ರೆಡ್ಡಿ ಅವರ ನೇತೃತ್ವದಲ್ಲಿ ಸಾವಿರಾರು ನಾಗರಿಕರು ಈ ಹೋರಾಟಕ್ಕೆ ಕೈಜೋಡಿಸಿ, ಇದನ್ನು ಒಂದು ಬೃಹತ್ ಜನಪರ ಹೋರಾಟವನ್ನಾಗಿ ರೂಪಿಸಿದರು ಎಂದು ಸ್ಮರಿಸಿದ್ದಾರೆ.
“ಬಳ್ಳಾರಿ ಪಾದಯಾತ್ರೆಯ ಬಳಿಕ ಉದ್ಯಾನವನಗಳನ್ನು ಕಬಳಿಸುವ ಸರ್ಕಾರದ ದುರ್ನೀತಿಯ ವಿರುದ್ಧ ಬಿಜೆಪಿಯ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ, ವ್ಯಾಪಕಗೊಳಿಸುವುದಾಗಿ ನಾವು ಎಚ್ಚರಿಕೆ ನೀಡಿದ್ದೆವು. ನಮ್ಮ ಈ ಹೋರಾಟದ ಬಿಸಿಗೆ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಚ್ಚಿಬಿದ್ದು, ಕೊನೆಗೂ ಹಿಂದೆ ಸರಿಯುವಂತಾಗಿದೆ. ತಡವಾದರೂ ಪರವಾಗಿಲ್ಲ, ಸರ್ಕಾರಕ್ಕೆ ಜ್ಞಾನೋದಯವಾಗಿರುವುದು ಸ್ವಾಗತಾರ್ಹ” ಎಂದು ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ನಗರದಾದ್ಯಂತ ಉದ್ಯಾನವನಗಳ ವಿಧೇಯಕದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ತೀವ್ರ ವಿರೋಧದ ಅಲೆ ಮತ್ತು ಬಲವಾದ ಜನಾಂದೋಲನವನ್ನು ಕಟ್ಟುವಲ್ಲಿ ಬಿಜೆಪಿ ಮುಂಚೂಣಿ ಪಾತ್ರ ವಹಿಸಿತ್ತು. ಸರ್ಕಾರದ ಈ ಜನವಿರೋಧಿ ನೀತಿಯ ವಿರುದ್ಧ ಪಕ್ಷವು ನಡೆಸಿದ ಜಾಗೃತಿ ಹಾಗೂ ನಿರಂತರ ಸಂಘಟನೆಯೇ ಇಂದಿನ ಈ ಯಶಸ್ಸಿಗೆ ಕಾರಣವಾಗಿದ್ದು, ನಮ್ಮ ನಿಲುವು ಅಂದು ಹೇಳಿದಂತೆ ಇಂದು ಸಂಪೂರ್ಣ ಸಾಬೀತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸುದ್ದಿ